
ಮಾನಸಿಕ ಒತ್ತಡದಿಂದ ಸ್ವಪ್ನಲ್ ಸಿದ್ದಿ ಆತ್ಮಹತ್ಯೆ
News Details
ಒಳ್ಳೆಯ ಕಂಪನಿ, ಉತ್ತಮ ವೇತನದಲ್ಲಿದ್ದರೂ ಮಾನಸಿಕ ನೆಮ್ಮದಿಯಿಲ್ಲದ ಕಾರಣ ಯಲ್ಲಾಪುರದ ಸ್ವಪ್ನಲ್ ಸಿದ್ದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯಲ್ಲಾಪುರದ ಕಿರವತ್ತಿಯ ಇಂದಿರಾನಗರದಲ್ಲಿ ಸ್ವಪ್ನಲ್ ಲಾರೆನ್ಸ್ ಸಿದ್ದಿ ವಾಸವಾಗಿದ್ದರು. 23 ವರ್ಷದ ಅವರಿಗೆ ಬೆಂಗಳೂರಿನ ಕಂಪನಿ ಉದ್ಯೋಗ ನೀಡಿತ್ತು. ಅಲ್ಲಿ ಕಷ್ಟಪಟ್ಟು ದುಡಿದು ಸಂಪಾದಿಸುತ್ತಿದ್ದ ಅವರು ಕೆಲ ದಿನದ ಹಿಂದೆ ಊರಿಗೆ ಬಂದಿದ್ದರು. ಏಪ್ರಿಲ್ 12ರ ಮಧ್ಯಾಹ್ನ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು.
ಮನೆಯಲ್ಲಿ ಮಲಗಿದ್ದ ಅವರು 2 ಗಂಟೆ ಆಸುಪಾಸಿನಲ್ಲಿ ಶೌಚಾಲಯಕ್ಕೆ ಹೋದರು. ಅಲ್ಲಿಯೇ ಅವರು ನೇಣು ಹಾಕಿಕೊಂಡು ಸಾವನಪ್ಪಿದರು. ಶೌಚಾಲಯದ ಜಂತಿಗೆ ನೇತಾಡುತ್ತಿದ್ದ ಸ್ವಪ್ನಲ್ ಸಿದ್ದಿ ಅವರನ್ನು ನೋಡಿದ ಅವರ ತಾಯಿ ಸೋಬಿನಾ ಸಿದ್ದಿ ಆತಂಕಕ್ಕೆ ಒಳಗಾದರು. 4 ಗಂಟೆ ಆಸುಪಾಸಿನಲ್ಲಿ ಸ್ವಪ್ನಲ್ ಸಿದ್ದಿ ಶವವಾಗಿದ್ದರು.
ಎಲ್ಲವೂ ಚನ್ನಾಗಿಯೇ ಇದ್ದರೂ ಸ್ವಪ್ನಲ್ ಸಿದ್ದಿ ಆತ್ಮಹತ್ಯೆಗೆ ಶರಣಾಗಿದ್ದು ಏಕೆ? ಎಂದು ಗೊತ್ತಾಗಿಲ್ಲ. ಹೀಗಾಗಿ ಈ ಸಾವಿನಲ್ಲಿ ಅನುಮಾನವಿರುವುದಾಗಿ ಅವರ ಕುಟುಂಬದವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸೋಬಿನಾ ಸಿದ್ದಿ ಅವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಾವಿನ ಸತ್ಯದ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದಾರೆ.