
ಕಳಚೆ ಭೂ ಕುಸಿತ ಅನುದಾನ ದುರುಪಯೋಗ ಆರೋಪ: ಆರ್ಟಿಐ ಕಾರ್ಯಕರ್ತನಿಗೆ ಬೆದರಿಕೆ
News Details
ಯಲ್ಲಾಪುರದ ಕಳಚೆ ಭೂ ಕುಸಿತ ಪರಿಣಾಮ ಸರ್ಕಾರ 15 ಕೋಟಿ ರೂ ಅನುದಾನ ನೀಡಿದ್ದು, ಅದನ್ನು ಕಳಚೆಹೊರತುಪಡಿಸಿ ಬೇರೆ ಬೇರೆ ಗ್ರಾಮಗಳಿಗೆ ಬಳಸಲಾಗಿದೆ. ಆ ಅನುದಾನ ಬಳಕೆಯಲ್ಲಿ ಸಹ ಅಕ್ರಮ ನಡೆದಿದೆ' ಎಂದು ಆರ್ಟಿಐ ಕಾರ್ಯಕರ್ತ ಧೀರಜ್ ತಿನೇಕರ್ ದೂರಿದ್ದಾರೆ. `ಈ ಬಗ್ಗೆ ತಾನು ಲೋಕಾಯುಕ್ತ ದೂರು ನೀಡಿದ್ದು, ತನಿಖೆ ವೇಳೆ 30ಕ್ಕೂ ಅಧಿಕ ಜನ ತಮ್ಮ ಮೇಲೆ ಹಲ್ಲೆಗೆ ಆಗಮಿಸಿದ್ದರು. ಈ ಬಗ್ಗೆಯೂ ಪೊಲೀಸ್ ದೂರು ನೀಡಿದ್ದೇನೆ' ಎಂದವರು ಹೇಳಿದ್ದಾರೆ.
ಯಲ್ಲಾಪುರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಕಳೆದ ಮೂರು ವರ್ಷಗಳ ಹಿಂದೆ ಪೃಕೃತಿ ವಿಕೋಪದಡಿಯಲ್ಲಿ ಮಂಜೂರಾದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ದಾಖಲೆಗಳ ಜೊತೆ ಲೋಕಾಯುಕ್ತರಿಗೆ ದೂರು ನೀಡಲಾಗಿದ್ದು, ಏಪ್ರಿಲ್ 7ರಂದು ಲೋಕಾಯುಕ್ತ ಅಧಿಕಾರಿ ಅಶೋಕ ಎಂಬಾತರು ದೇಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಗೆ ತನಿಖೆಗೆ ಬಂದಿದ್ದರು. ಆ ವೇಳೆ ತನ್ನನ್ನು ಸ್ಥಳಕ್ಕೆ ಕರೆಯಲಾಗಿದ್ದು, ದೂರುದಾರನಾದ ನನ್ನ ಮೇಲೆ ಅಲ್ಲಿನ ಕೆಲವರು ದಾಳಿಗೆ ಮುಂದಾದರು' ಎಂದು ಧೀರಜ್ ತಿನ್ನೇಕರ್ ವಿವರಿಸಿದರು.
`ಅಲ್ಲಿ ನಡೆದ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಕ್ರಿಯಾ ಯೋಜನೆ ಪ್ರಕಾರ ರಸ್ತೆ ಮಾಡದೇ ಹಣ ಹೊಡೆಯಲಾಗಿದೆ. ಒಂದೇ ರಸ್ತೆಗೆ ಬೇರೆ ಬೇರೆ ಬಿಲ್ ಅಳವಡಿಸಿ ಅವ್ಯವಹಾರ ನಡೆಸಲಾಗಿದೆ. ಅಗತ್ಯವಿರುವಲ್ಲಿ ಪೈಪ್ ಅಳವಡಿಸದೇ ಪೈಪ್ ಅಳವಡಿಸಿರುವ ದಾಖಲೆ ಸೃಷ್ಠಿಸಿ ಸರ್ಕಾರಕ್ಕೆ ವಂಚಿಸಲಾಗಿದೆ' ಎಂದು ದೂರಿದರು. `ತನ್ನ ಮೇಲೆ ಹಲ್ಲೆಗೆ ಬಂದ ಜನ ಗುತ್ತಿಗೆದಾರ ಗಣಪತಿ ಮುದ್ದೆಪಾಲ ಅವರಿಗೆ ಜೈಕಾರ ಹಾಕುತ್ತಿದ್ದು, ಅವರ ಕುಮ್ಮಕ್ಕಿನಲ್ಲಿ ಈ ಘಟನೆ ನಡೆದಿರುವುದು ಸ್ಪಷ್ಠವಾಗುತ್ತದೆ. ಲೋಕಾಯುಕ್ತ ತನಿಖೆ ವೇಳೆ ಇಂಜನೀಯರ್ ಅಜೀಜ, ಜಿ ಪಂ ಎಇಇ ಅಶೋಕ ಬಂಟ ಅವರು ಸಹ ಕಾಮಗಾರಿ ನಡೆದ ಸ್ಥಳ ತೋರಿಸಲು ವಿಫಲರಾಗಿದ್ದಾರೆ' ಎಂದು ದೂರಿದರು.
`ಈ ಹಿನ್ನಲೆಯಲ್ಲಿ ಸರಕಾರದ ಹಣ ದುರುಪಯೋಗ ಮಾಡಿದ ಗುತ್ತಿಗೆದಾರ ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ನನ್ನ ಮೇಲೆ ಹಲ್ಲೆಗೆ ಮುಂದಾದವರ ಪೈಲಿ 16 ಜನರ ವಿವಿರವನ್ನು ಪೊಲೀಸರಿಗೆ ನೀಡಿದ್ದು, ಅವರ ವಿರುದ್ಧ ಕ್ರಮವಾಗಬೇಕು' ಎಂದು ಆಗ್ರಹಿಸಿದರು. ಘಟನಾವಳಿಗೆ ಸಂಬoಧಿಸಿದ ಆಡಿಯೋ ಹಾಗೂ ವಿಡಿಯೋವನ್ನು ಪ್ರದರ್ಶಿಸಿದರು.